ಪ್ರಕೃತಿಯ ಈ ತೊಟ್ಟಿಲಲ್ಲಿ ನೆಲೆಸಿರುವ ಮಾನವನೆ,
ಮರೆಯದಿರು ನೀ ಈ ಪ್ರಕೃತಿಯಿಂದಲೇ ಪಡೆದ ಜ್ಞಾನವೆಂದು,
ಸ್ಪಷ್ಟವಾಗುವುದಿಲ್ಲಿ ತಾಯಿ-ಮಗುವಿನ ಸಂಬಂಧವಿದೆಯೆಂದು,
ಆ ಮಾತೆಯೇ ನಿನ್ನ ಪಾಪ ಪುಣ್ಯಗಳ ಹೊರುವಳೆಂದು.

ದೇಶ ದೇಶ ದೇಶ ಎಂದು ದೇಶ ಸೇವೆ ಮಾಡಿದೆ ನೀನು
ಸಾಹಿತ್ಯ ಕಲೆಯ ಬೆಳೆಸಿ ನೀ ಮೆರಗುಗೊಳಿಸಿದೆ ಪ್ರಕೃತಿಯನ್ನು,
ಮೆಚ್ಚಿದಳಾ ಪ್ರಕೃತಿ ನಿನ್ನ ಹಾಡು ಹೊಗಳಿಕೆಗೆ,
ಇದರಿಂದರಿವಾಗುವುದು ಆಕೆ ಸಹಿಸುವಳು ನಿನ್ನ ಸ್ವಾರ್ಥಪರತೆಯನ್ನು

ಆಕೆಯಿಂದ ಪಡೆದೆ ನೀ ಜೀವನಕ್ಕಾಗುವಷ್ಟೆಲ್ಲವನ್ನು
ನೀ ಮೇಲೇರಲು ಕಡೆಗಾಣಿಸಿದೆ, ನಾಶಕ್ಕೂ ಸಿದ್ಧವಾದೆ ಆಕೆಯನ್ನು
ಭೂಕಂಪ, ಪ್ರಳಯ, ಅತಿವೃಷ್ಟಿಯೆಂಬ ಎಚ್ಚರಿಕೆ ಬರಲು
ಸಿದ್ಧನಾದೆ ನೀ ಕಡಿಯಲು ತಾಯಿ ಮಗುವಿನ ಸಂಬಂಧವನ್ನು.

ಏಕೆ ಆಲೋಚಿಸುವೆ ಪ್ರಕೃತಿಯಿಂದೇನು ಪಡೆದೆ ನೀನೆಂದು
ಪ್ರಶ್ನಿಸಿಕೊ ನೀನೇನು ಮಾಡಿದೆ ಈ ಪ್ರಕೃತಿಗೆಂದು
ಪ್ರಕೃತಿ ತನ್ನ ಮಡಿಲಲ್ಲಿ ನಿನ್ನ ಹೊತ್ತು ತನ್ನನ್ನೇ ತಾ ತ್ಯಜಿಸಿದರೆ,
ನಿನಗೆಲ್ಲಿ ನೆಲೆಯಿದೆ ಯೋಚಿಸಿನ್ನು.

ಇನ್ನೆಷ್ಟು ಹೊರುವಳು ಆ ಮಾತೆ ನಿನ್ನ ಪಾಪವನ್ನು
ನೀನರಿಯೆ ಆಕೆಯ ಅಂತರಾತ್ಮವನ್ನು
ಪಶ್ಚತ್ತಾನವೆಂಬ ಬೆಂಕಿ ನಿನ್ನ ಬಳಿ ಬರುವುದರೊಳಗೆ
ಆ ತೊಟ್ಟಿಲು ಮುರಿದು ಕೆಳಗೆ ಬೀಳುವೆ ನೀ ಮರೆಯದಿರಿನ್ನು.

ಪ್ರೀತಿ ಕಲ್ಲಾದಾಗ, ನಂಬಿಕೆ ಮುಳ್ಳಾದಾಗ
ಕೈಗೆ ಸಿಕ್ಕಿದ್ದು ಬಾಯಿಗೆ ಬರದಾಗ
ಅರ್ಥವಾಗುವುದು ಪ್ರಕೃತಿ ಏನೆಂದು
ಅಕೆಯ ಬಗ್ಗೆ ನೀ ಯೋಚಿಸಿದಾಗ.
-ಅಕ್ಷತಾ ಕೊಠಾರಿ

Leave a Reply

Your email address will not be published. Required fields are marked *